ಪುಟಗಳು

ಸಂಧಿಗಳು

ಸಂಧಿಗಳು

ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

  1. ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನಿಸುವುದು.

    ಸ್ವರಸಂಧಿ = ಸ್ವರ + ಸ್ವರ

  2. ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನಿಸುವುದು.

    ವ್ಯಂಜನ ಸಂಧಿ = ಸ್ವರ + ವ್ಯಂಜನ

    ವ್ಯಂಜನ ಸಂಧಿ = ವ್ಯಂಜನ + ಸ್ವರ


ಕನ್ನಡ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ಧಗಳು ಸೇರಿರುವುದರಿಂದ, ಕೆಲವು ಸಂಸ್ಕೃತ ಸಂಧಿಗಳನ್ನು ಕನ್ನಡದಲ್ಲಿ ಸೇರಿಸಲಾಗಿದೆ. 
ಸಂಧಿ ಕಾರ್ಯವು ಎರಡು ಕನ್ನಡ ಶಬ್ಧಗಳ ನಡುವೆ ಏರ್ಪಟ್ಟರೆ ಅವನ್ನು ಕನ್ನಡ ಸಂಧಿಯಾಗಿ ಮತ್ತು ಎರಡರಲ್ಲಿ ಒಂದು ಸಂಸ್ಕೃತ ಪದವಾಗಿದ್ದರೆ ಅವನ್ನು ಸಂಸ್ಕೃತ ಸಂಧಿಯಾಗಿ ಪರಿಗಣಿಸಲಾಗುತ್ತದೆ.


ಕನ್ನಡ ಸಂಧಿಗಳು

ಕನ್ನಡ ಸಂಧಿಯಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧಗಳುಂಟು.


Kuvempu
  1. ಲೋಪ ಸಂಧಿ

    ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.


    ಉದಾ:

    ನಾವು + ಎಲ್ಲಾ = ನಾವೆಲ್ಲಾ ('ಉ' ಕಾರ ಲೋಪ)
    ಬೇರೆ + ಒಂದು = ಬೇರೊಂದು ('ಎ' ಕಾರ ಲೋಪ)
    ಮಾತು + ಇಲ್ಲ = ಮಾತಿಲ್ಲ ('ಉ' ಕಾರ ಲೋಪ)
    ಮಾಡು + ಇಸು = ಮಾಡಿಸು ('ಉ' ಕಾರ ಲೋಪ)
  2. ಆಗಮ ಸಂಧಿ

    ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.

    ಆ, ಇ, ಈ, ಎ, ಏ, ಐ, ಓ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ಯ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ಯಕಾರಾಗಮ ಸಂಧಿ ಎಂದು ಹೆಸರು.

    ಉದಾ:

    ಕೆರೆ + ಅಲ್ಲಿ = ಕೆರೆಯಲ್ಲಿ
    ಗಾಳಿ + ಅನ್ನು = ಗಾಳಿಯನ್ನು
    ಮಳೆ + ಇಂದ = ಮಳೆಯಿಂದ
    ಮೇ + ಇಸು = ಮೇಯಿಸು

    ಉ, ಊ, ಋ, ಓ, ಔ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ವ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ವಕಾರಾಗಮ ಸಂಧಿ ಎಂದು ಹೆಸರು.

    ಉದಾ:

    ಮಗು + ಇಗೆ = ಮಗುವಿಗೆ
    ಗುರು + ಅನ್ನು = ಗುರುವನ್ನು
    ಹೂ + ಇದು = ಹೂವಿದು
    ಮಾತೃ + ಅನ್ನು = ಮಾತೃವನ್ನು
  3. ಆದೇಶ ಸಂಧಿ

  4. ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.

    ಆದೇಶ ಸಂಧಿಯಲ್ಲಿ ಉತ್ತರ ಪದದ ಮೊದಲಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.


    ಉದಾ:

    ಮಳೆ + ಕಾಲ = ಮಳೆಗಾಲ
    ಬೆಟ್ಟ + ತಾವರೆ = ಬೆಟ್ಟದಾವರೆ
    ಕಣ್ + ಪನಿ = ಕಂಬನಿ
    ಹೊಸ + ಕನ್ನಡ = ಹೊಸಗನ್ನಡ



ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ.


Kuvempu

ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು.

ಸಂಸ್ಕೃತ ಸ್ವರ ಸಂಧಿಗಳು

ಸ್ವರಸಂಧಿಗಳಲ್ಲಿ ಮುಖ್ಯವಾದವುಗಳು, ಸವರ್ಣಧೀರ್ಘ ಸಂಧಿ, ಗುಣ ಸಂಧಿ, ವೃದ್ಧಿ ಸಂಧಿ, ಯಣ್ ಸಂಧಿ.

  1. ಸವರ್ಣಧೀರ್ಘ ಸಂಧಿ

    ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.


    ಉದಾ:

    ದೇವ + ಅಸುರ = ದೇವಾಸುರ
    ಸುರ + ಅಸುರ = ಸುರಾಸುರ
    ಮಹಾ + ಆತ್ಮ = ಮಹಾತ್ಮ
    ಕವಿ + ಇಂದ್ರ = ಕವೀಂದ್ರ
    ಗಿರಿ + ಈಶ = ಗಿರೀಶ
    ಲಕ್ಷೀ + ಈಶ = ಲಕ್ಷ್ಮೀಶ
  2. ಗುಣ ಸಂಧಿ

    ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಓ' ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಆರ್' ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಗುಣಸಂಧಿ' ಎಂದು ಹೆಸರು.


    ಉದಾ:

    ಸುರ + ಇಂದ್ರ = ಸುರೇಂದ್ರ
    ಧರಾ + ಇಂದ್ರ = ಧರೇಂದ್ರ
    ಮಹಾ + ಈಶ್ವರ = ಮಹೇಶ್ವರ
    ಚಂದ್ರ + ಉದಯ = ಚಂದ್ರೋದಯ
    ದೇವ + ಋಷಿ = ದೇವರ್ಷಿ
    ಮಹಾ + ಋಷಿ = ಮಹರ್ಷಿ
  3. ವೃದ್ಧಿಸಂಧಿ

    ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.

    ಉದಾ:

    ಲೋಕ + ಏಕವೀರ = ಲೋಕೈಕವೀರ
    ಜನ + ಐಕ್ಯ = ಜನೈಕ್ಯ
    ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ
    ಘನ + ಔದಾರ್ಯ = ಘನೌದಾರ್ಯ
    ಮಹಾ + ಔದಾರ್ಯ = ಮಹೌದಾರ್ಯ
  4. ಯಣ್ ಸಂಧಿ

    ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ 'ಯ್' ಕಾರವು, ಉ, ಊ, ಕಾರಗಳಿಗೆ 'ವ್' ಕಾರವು, ಋ ಕಾರಕ್ಕೆ 'ರ್' ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.


    ಉದಾ:

    ಅತಿ + ಅವಸರ = ಅತ್ಯವಸರ
    ಜಾತಿ + ಅತೀತ = ಜಾತ್ಯಾತೀತ
    ಕೋಟಿ + ಅಧೀಶ = ಕೋಟ್ಯಾಧೀಶ
    ಗತಿ + ಅಂತರ = ಗತ್ಯಂತರ
    ಪ್ರತಿ + ಉತ್ತರ = ಪ್ರತ್ಯುತ್ತರ
    ಅತಿ + ಆಸೆ = ಅತ್ಯಾಸೆ
    ಗುರು + ಆಜ್ಞೆ = ಗುರ್ವಾಜ್ಞೆ
    ಮನು + ಆದಿ = ಮನ್ವಾದಿ

    ಸಂಸ್ಕೃತ ವ್ಯಂಜನ ಸಂಧಿಗಳು

    ಸಂಸ್ಕೃತ ವ್ಯಂಜನ ಸಂಧಿಗಳಲ್ಲಿ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿ ಇರುವುದು ಜತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ.

  1. ಜತ್ವ ಸಂಧಿ

    ಮೊದಲ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ, ಜ, ಡ, ದ, ಬ) ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಜತ್ವ ಸಂಧಿ' ಎನ್ನುವರು.


    ಉದಾ:

    ವಾಕ್ + ಈಶ = ವಾಗೀಶ
    ವಾಕ್ + ದಾನ = ವಾಗ್ದಾನ
    ದಿಕ್ + ಅಂತ = ದಿಗಂತ
    ಅಚ್ + ಆದಿ = ಅಜಾದಿ
    ಷಟ್ + ಆನನ = ಷಡಾನನ
    ವಿರಾಟ್ + ರೂಪ = ವಿರಾಡ್ರೂಪ
    ಸತ್ + ಉದ್ದೇಶ = ಸದುದ್ದೇಶ
    ಬೃಹತ್ + ಆಕಾರ = ಬೃಹದಾಕಾರ
    ಸತ್ + ಭಾವನೆ = ಸದ್ಭಾವನೆ
    ಚಿತ್ + ಆನಂದ = ಚಿದಾನಂದ
  2. ಶ್ಚುತ್ವ ಸಂಧಿ

    'ಸ' ಕಾರ 'ತ' ವರ್ಗಾಕ್ಷರಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವು, 'ತ' ವರ್ಗಕ್ಕೆ 'ಚ' ವರ್ಗವು ಆದೇಶಗಳಾಗಿ ಬರುತ್ತವೆ. ಇದಕ್ಕೆ ಶ್ಚುತ್ವ ಸಂಧಿಯೆಂದು ಹೆಸರು.


    ಉದಾ:

    ಪಯಸ್ + ಶಯನ = ಪಯಶ್ಯಯನ
    ಮನಸ್ + ಚಂಚಲ = ಮನಶ್ಚಂಚಲ
    ಮನಸ್ + ಚಾಪಲ್ಯ = ಮನಶ್ಚಾಪಲ್ಯ
    ಶರತ್ + ಚಂದ್ರ = ಶರಚ್ಚಂದ್ರ
    ಜಗತ್ + ಜ್ಯೋತಿ = ಜಗಜ್ಯೋತಿ
    ಯಶಸ್ + ಶರೀರ = ಯಶಶ್ಯರೀರ
  3. ಅನುನಾಸಿಕ ಸಂಧಿ

    ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೂ ಅವುಗಳಿಗೆ ಅಂದರೆ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶವಾಗಿ ಬರುತ್ತವೆ.

    ಉದಾ:

    ದಿಕ್ + ನಾಗ = ದಿಙ್ನಾಗ
    ಷಟ್ + ಮಾಸ = ಷಣ್ಮಾಸ
    ವಾಕ್ + ಮಾಧುರ್ಯ = ವಾಙ್ಮಾಧುರ್ಯ
    ಚಿತ್ + ಮಯ = ಚಿನ್ಮಯ
    ಸತ್ + ಮಣಿ = ಸನ್ಮಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಓದು ಬೆಳಕು ಕಾರ್ಯಕ್ರಮದ ವರದಿ

ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಓದು ಬೆಳಕು ಕಾರ್ಯಕ್ರಮ